ಗುವಾಹಟಿ: ಅಸ್ಸಾಂನ ಗುವಾಹಟಿಯ ಜನನಿಬಿಡ ಪ್ರದೇಶದ ಮಗ್ಗುಲಲ್ಲಿ ಶಾಂತವಾಗಿರುವ ಬಿ ಬರೂವಾ ರಸ್ತೆ ಬಹುತೇಕರು ಮರೆತು ಹೋದ ಕಥೆ ಹೊಂದಿರುವ ಪ್ರದೇಶ. ಇಲ್ಲಿನ ಇತಿಹಾಸ ಕೆದಕಿದಾಗ ಇಲ್ಲಿನ ನಿವಾಸಿಗರ ಹೋರಾಟ, ಸ್ಥಳಾಂತರದ ಸಂಗತಿಗಳು ಮತ್ತು ಶೂನ್ಯದಿಂದ ಆಗಮಿಸಿ ಬದುಕು ಕಟ್ಟಿಕೊಂಡ ಪರಿ ತಿಳಿಯುತ್ತವೆ. ತೆಲುಗು ಕಾಲೊನಿ ಎಂಬ ಹೆಸರಿನಿಂದಲೇ ಕರೆಯಲಾಗುವ ಇಲ್ಲಿನ ಜನರ ಇತಿಹಾಸ ಕುತೂಹಲಕಾರಿಯಾಗಿದೆ.
ಅಸ್ಸಾಂನಲ್ಲಿರುವ ಈ ತೆಲುಗು ಕಾಲೊನಿಯ ಇತಿಹಾಸ ರಾಜ್ಯಕ್ಕೆ ಸಂಬಂಧಿಸಿಲ್ಲ. ಬದಲಾಗಿ ಇದು ಎರಡನೇ ಮಹಾಯುದ್ದದಲ್ಲಿ ಬರ್ಮಾ ಯುದ್ಧಭೂಮಿಯಿಂದ ಬಂದ ನೂರಾರು ಅದರಲ್ಲೂ ಹೆಚ್ಚು ತೆಲುಗು ಜನರ ಕಥೆಯನ್ನು ಒಳಗೊಂಡಿದೆ. ಹಲವು ಪೀಳಿಗೆಗಳಿಂದ ವಾಸಿಸುತ್ತಿರುವ ಈ ಜನರ ಬದುಕು ಬದಲಾಗಿದ್ದು, ಮಹಾಯುದ್ಧದ ಸಂದರ್ಭದಲ್ಲಿ.

ತಮ್ಮ ವಲಸೆಯ ಕುರಿತು ಮಾತನಾಡಿದ ಇಲ್ಲಿನ ಸಮುದಾಯದ ಹಿರಿಯ ನಿವಾಸಿ ಟಿ.ಬಿ.ದೇಮುಡು ರಾವ್, "ಆ ಸಂದರ್ಭದಲ್ಲಿ ಬರ್ಮಾ ಸರ್ಕಾರ ವಿದೇಶಿಗರನ್ನು ಬಲವಂತವಾಗಿ ಹೊರದಬ್ಬಿತು. ಯಾವುದೇ ಆಯ್ಕೆಯಿಲ್ಲದೆ ನಮ್ಮ ಜನರು ಹೊರಬಂದರು" ಎಂದು ತಿಳಿಸಿದರು.
"ಇದು ಯೋಜಿತ ವಲಸೆಯಲ್ಲ. ಹೀಗಾಗಿ ನಾವು ಹೊರಟಾಗ ಬಸ್ ಅಥವಾ ಟ್ರೈನ್ ಇರಲಿಲ್ಲ. ಯಾವುದೇ ಮ್ಯಾಪ್ ಅಥವಾ ಮಾರ್ಗದರ್ಶನವೂ ಇರಲಿಲ್ಲ. ಬದಲಾಗಿ ಕೇವಲ ಭಯ ಮತ್ತು ಬದುಕಬೇಕು ಎಂಬ ಇಚ್ಛೆ ಇತ್ತು. ಕುಟುಂಬಗಳ ಜೊತೆಯಲ್ಲಿ ಕಾಡಿನ ಮೂಲಕ ನದಿಗಳನ್ನು ದಾಟಿ, ಬೆಟ್ಟಗುಡ್ಡಗಳನ್ನು ಹತ್ತಿ ಬರಿಗಾಲಲ್ಲಿ, ಹಸಿವಿನಿಂದ ಹೊರಟೆವು. ಭಾರತಕ್ಕೆ ಬರಲು ನಮಗೆ ಮೂರು ತಿಂಗಳು ಬೇಕಾಯಿತು" ಎಂದು ನೆನೆದರು.

"ಬರ್ಮಾದಿಂದ ಟಿನ್ಸುಕಿಯಾಗೆ ನಡೆದುಕೊಂಡೇ ಬಂದ ಹಲವರಲ್ಲಿ ನನ್ನ ಪೋಷಕರೂ ಇದ್ದರು. ಅಲ್ಲಿಂದ 30 ಮಂದಿ ರೈಲಿನಲ್ಲಿ ಗುವಾಹಟಿ ತಲುಪಿದರು. ಹೀಗೆ ನಮ್ಮ ಬದುಕು ಇಲ್ಲಿ ಪ್ರಾರಂಭವಾಯಿತು" ಎಂದು ತಮ್ಮ ವಲಸೆ ವೃತ್ತಾಂತ ವಿವರಿಸಿದರು.
ಶೂನ್ಯದಿಂದ ಬದುಕು ಆರಂಭ: ಗುವಾಹಟಿಗೆ ಬಂದ ನಮಗೆ ಇಲ್ಲಿ ಯಾರ ಮನೆಯೂ ಇರಲಿಲ್ಲ. ಯಾವುದೇ ವ್ಯವಸ್ಥೆಯ ಬೆಂಬಲವಿರಲಿಲ್ಲ. ಬಿ ಬರೊವಾ ರಸ್ತೆಯ ಹತ್ತಿರದ ಕಾಡಿನ ಬದಿಯಲ್ಲಿ ಆಶ್ರಯ ಪಡೆದೆವು. ಅಲ್ಲಿ ಭೂಮಿಯನ್ನು ಸಜ್ಜುಗೊಳಿಸಿ, ಮನೆ ನಿರ್ಮಾಣ ಮಾಡಿದೆವು. ಬಹುತೇಕರು ಜೀವನೋಪಾಯಕ್ಕೆ ಗುವಾಹಟಿ ಪಂಚಾಯತ್ನಲ್ಲಿ ನೈರ್ಮಲ್ಯ ಕಾರ್ಮಿಕರಾಗಿ ಸೇರಿದೆವು. ಈ ಸಮಯದಲ್ಲಿ ನಾವು ಇಲ್ಲಿ ಬಂದು ಸೇರಿದ ಸುದ್ದಿ ಆಂಧ್ರ ಪ್ರದೇಶದಲ್ಲಿದ್ದ ಸಂಬಂಧಿಕರಿಗೆ ತಲುಪಿತು. ಒಂದರ ಮೇಲೊಂದರಂತೆ ತೆಲುಗು ಕುಟುಂಬಗಳು ಇಲ್ಲಿ ಬಂದು ಸೇರಿದೆವು.
ನಮ್ಮಂತೆ ದುರ್ಬಲ ಅನೇಕ ತೆಲುಗು ಕುಟುಂಬಗಳು ಇಲ್ಲಿ ಬಂದು ಸೇರಿದವು. ಆಗ ಪಂಚಾಯತ್ ಮುಂದಾಳತ್ವ ಹೊಂದಿದ್ದ ಗೊಲಪ್ ಚೌದರಿ ನಮಗೆ ಕ್ವಾಟ್ರಸ್ ಸಹಾಯ ಮಾಡಿದರು. ಬಳಿಕ ಜಿಎಂಸಿ ಮತ್ತು ಇತರೆ ಅಧಿಕಾರಿಗಳು ನಮ್ಮ ಸಂಖ್ಯೆ ಬೆಳೆದಂತೆ ಮನೆಗಳ ನಿರ್ಮಾಣ ಮಾಡಿಕೊಡಲು ಸಹಾಯ ಮಾಡಿದರು.

30 ಜನರಿಂದ ಆದ ಸಮುದಾಯದಲ್ಲಿ ಇಂದು 50,000 ಜನರಿದ್ದೇವೆ. ಗುವಾಹಟಿಯ 16 ಎಕರೆ ಪ್ರದೇಶದಲ್ಲಿ ಹರಡಿದ್ದೇವೆ. ಅವರಲ್ಲಿ ಅನೇಕರು ಶಿಕ್ಷಕರು, ಇಂಜಿನಿಯರ್, ಸರ್ಕಾರಿ ಅಧಿಕಾರಿಗಳು, ಅಂಗಡಿ ಮಾಲೀಕರೂ ಆಗಿದ್ದಾರೆ. ಯುದ್ಧಭೂಮಿಯಿಂದ ಹೊರಹಾಕಲ್ಪಟ್ಟ ನಾವು ಶೂನ್ಯದಿಂದ ಬದುಕು ನಿರ್ಮಿಸಿದ್ದೇವೆ ಎಂದು ರಾವ್ ತಿಳಿಸಿದರು.
ಭಾಷೆ, ಬೇರಿನ ಹಿಡಿತ: ನಮ್ಮ ಪೂರ್ವಜರ ಭೂಮಿಯಿಂದ ಸಾವಿರಾರು ಕಿ.ಮೀ ದೂರದಲ್ಲಿ ನಾವಿದ್ದರೂ, ಇಲ್ಲಿನ ತೆಲುಗು ಸಮುದಾಯ ತಮ್ಮ ಮೂಲ ಮರೆಯಲಿಲ್ಲ. ಗಣೇಶ ಚತುರ್ಥಿ, ನಾಗ ಪೂಜೆ ಮತ್ತು ಸಂಕ್ರಾಂತಿಯಂತಹ ಸಾಂಸ್ಕೃತಿಕ ಹಬ್ಬಗಳನ್ನು ಒಟ್ಟಾಗಿ ಆಚರಿಸುತ್ತೇವೆ. ತಮ್ಮ ಭಾಷೆಯನ್ನು ಉಳಿಸಲು ಸಾಕಷ್ಟು ಹೋರಾಟಗಳನ್ನು ನಾವು ಮಾಡಿವು ಎಂದರು.
ಬರ್ಮಾದಲ್ಲಿ ತೆಲುಗು ಓದಿದ್ದ ಸನ್ಯಾಸಿ ರಾವ್ ಎಂಬವರು ಇಲ್ಲಿಗೆ ಆಗಮಿಸಿ ನಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕಲಿಸಲು ಮುಂದಾದರು. ಹೀಗೆ ನಮ್ಮ ಭಾಷೆಯನ್ನು ಉಳಿಸುವ ಪ್ರಯತ್ನ ಮುಂದುವರೆಯಿತು ಎಂದು ದೆಮುಡು ರಾವ್ ಸ್ಮರಿಸಿದರು.
ಇಂದೂ ಕೂಡ ಅನೇಕರು ತೆಲುಗು ಮಾತನಾಡಿದರೂ, ಕೆಲವರಿಗೆ ಮಾತ್ರ ನಿರರ್ಗಳವಾಗಿ ಓದಲು ಮತ್ತು ಬರೆಯಲು ಗೊತ್ತಷ್ಟೇ. ಸಮುದಾಯದ ಜನರು ತಮಗೆ ಸಾಧ್ಯವಾದ ಎಲ್ಲಾ ಪ್ರಯತ್ನ ಮಾಡಿದ್ದು, ಇಲ್ಲಿನ ಎರಡನೇ ಪೀಳಿಗೆಯ ನಿವಾಸಿಯಾಗಿರುವ ಪ್ರಕಾಶ್ ರಾವ್ ಎಂಬ ಸ್ಥಳೀಯ ಶಿಕ್ಷಕರು, ತಮ್ಮ ಪೂರ್ವಜರ ಪ್ರಯತ್ನವನ್ನು ಮುಂದುವರೆಸಿ, ಭಾಷೆಯ ರಕ್ಷಣೆ ಮಾಡಿದ್ದಾರೆ ಎಂದರು.

ಈ ಕುರಿತು ಮಾತನಾಡಿರುವ ಪ್ರಕಾಶ್ ರಾವ್, ನಾನು ಮಕ್ಕಳಿಗೆ ಅಸ್ಸಾಮಿ, ಹಿಂದಿ ಮತ್ತು ಇಂಗ್ಲಿಷ್ ಜೊತೆಗೆ ತೆಲುಗು ಹೇಳಿಕೊಡುತ್ತೇನೆ. ನನ್ನ ಕೆಲವು ವಿದ್ಯಾರ್ಥಿಗಳಿಗೆ ಅವರ ಮಾತೃಭಾಷೆ ಗೊತ್ತಿದೆ ಎಂಬ ಕಾರಣಕ್ಕೆ ಆಂಧ್ರ ಪ್ರದೇಶದಲ್ಲಿ ಉದ್ಯೋಗ ಪಡೆದಿದ್ದಾರೆ. ನನ್ನ ತಂದೆ ಬರ್ಮಾದಿಂದ ಇಲ್ಲಿ ಆಗಮಿಸಿದ್ದರು. ನಾನು ವಿಶಾಖಪಟ್ಟಣಂ ಮೂಲದ ಹುಡುಗಿಯನ್ನು ಮದುವೆಯಾದೆ. ನಮ್ಮ ಮಗ ಇಲ್ಲಿಯೇ ಓದುತ್ತಿದ್ದು, ನಮ್ಮ ಮೂಲ ಬೇರುಗಳೊಂದಿಗೆ ಸಂಬಂಧ ಇನ್ನೂ ಜೀವಂತವಾಗಿದೆ ಎನ್ನುತ್ತಾರೆ.
ಎರಡು ಜಗತ್ತಿನ ನಡುವೆ...: ಇಲ್ಲಿನ ತೆಲುಗು ಕಾಲೊನಿಯಲ್ಲಿ ಶೇ 30ರಷ್ಟು ಮಂದಿ ಆಂಧ್ರ ಪ್ರದೇಶದವರು. ಆದರೆ ನಾವು ಅಲ್ಲಿಗೆ ಹೋಗುವುದು ಅಪರೂಪ. ಅನೇಕ ಮಂದಿ ಪ್ರಯಾಣ ಮಾಡುವ ಸಾಮರ್ಥ್ಯವನ್ನು ಹೊಂದಿಲ್ಲ. ಭಾವನಾತ್ಮಕ ಅಂತರ ಎಂದಿಗೂ ದೂರವಲ್ಲ ಎಂದರು.
ಮದುವೆಯಾಗಿ ಈ ಕಾಲೊನಿಗೆ ಬಂದಿರುವ ಚಿಟ್ಟಿ ಎಂಬವರು ಮಾತನಾಡಿ, ಇಂದಿಗೂ ನನ್ನ ಹೃದಯ ಅಲ್ಲಿಯೇ ಇದೆ. ವಿಶಾಖಪಟ್ಟಣಂ ಬಳಿಯ ಗ್ರಾಮದ ಬಳಿ ನಾನು ಹುಟ್ಟಿದ್ದು, ಅಲ್ಲಿಯೇ ಬೆಳೆದಿದ್ದು. ಇಲ್ಲಿಯೇ ನಾವು ಇಲ್ಲಿಯೇ ಜೀವನ ಸಾಗಿಸುತ್ತಿದ್ದು, ಒಟ್ಟಿಗೆ ಹಬ್ಬದ ಆಚರಣೆ ಮಾಡುತ್ತಿರುತ್ತೇವೆ. ವಿಶೇಷವಾಗಿ ಸಂಕ್ರಾತಿಯಂದು ನಾನು ನನ್ನ ಮನೆಯನ್ನು ಮಿಸ್ ಮಾಡಿಕೊಳ್ಳುತ್ತೇನೆ. ಇದೀಗ ಇದು ನನ್ನ ಮನೆ, ಇಲ್ಲಿಯೇ ನನ್ನ ಜೀವನ ಎಂದರು.
ತೆಲುಗು ಕಾಲೊನಿ ಹೆಸರಿನ ಹಿಂದೆ..: ಪ್ರಾಥಮಿಕವಾಗಿ ಈ ಸ್ಥಳವನ್ನು ಮೊರಿಶಾಲಿ ಎಂದು ಕರೆಯಲಾಗುತ್ತಿತ್ತು. ಮೊರಿಶಾಲಿ ಎಂದರೆ ಸ್ಮಶಾನ ಎಂದರ್ಥ. ಜನಸಂಖ್ಯೆ ಹೆಚ್ಚಾದಂತೆ ಸ್ಥಳೀಯರು ಎಂದು ಮದ್ರಾಸಿ ಕಾಲೊನಿ ಎಂದು ಕರೆಯುತ್ತಿದ್ದರು. 1984ರ ಬಳಿಕ ಎಲ್ಲವೂ ಬದಲಾಯಿತು.

ಆ ವರ್ಷ ಆಂಧ್ರ ಪ್ರದೇಶದ ಜನಪ್ರಿಯ ಮುಖ್ಯಮಂತ್ರಿಯಾಗಿದ್ದ ಎನ್.ಟಿ.ರಾಮ್ ರಾವ್, ಗುವಾಹಟಿಗೆ ಭೇಟಿ ನೀಡಿದ್ದರು. ಈ ವೇಳೆ ಅವರಿಗೆ ನಮ್ಮನ್ನು ಮದ್ರಾಸಿ ಎಂದು ಕರೆಯುತ್ತಿರುವುದಾಗಿ ಹೇಳಿದೆವು. ಆಗ ವೇದಿಕೆ ವೇಳೆ ಅವರು, ಇವರೆಲ್ಲಾ ತೆಲುಗು ಜನರು. ಅವರನ್ನು ಇನ್ಮುಂದೆ ತೆಲುಗು ಕಾಲೊನಿ ಎಂದು ಕರೆಯುವಂತೆ ತಿಳಿಸಿದರು. ಇದು ಕೇವಲ ಹೆಸರಾಗಿರಲಿಲ್ಲ. ಇದು ನಮ್ಮ ಗುರುತು, ನಮ್ಮ ಹಿಂದಿನ ಧ್ವನಿಯಾಯಿತು ಎಂದರು.
ಸಮುದಾಯದ ಧೈರ್ಯ: ತೆಲುಗು ಕಾಲೊನಿಯ ಜನರ ಕಥೆ ಕೇವಲ ವಲಸಿಗರ ಕಥೆಯಲ್ಲ. ಇದು ಮನೆ, ದೇಶ ಮತ್ತು ಕುಟುಂಬವನ್ನೂ ಕಳೆದುಕೊಂಡವರ ಕಥೆ. ಭರವಸೆ ಕಳೆದುಕೊಳ್ಳದವರ ಕಥೆಯೂ ಹೌದು. ಇದು ಸಮುದಾಯವೊಂದು ಸದ್ದಿಲ್ಲದೆ ತಮ್ಮ ಭಾಷೆ ಮತ್ತು ಸಂಸ್ಕೃತಿಯ ಘನತೆ ಕಾಪಾಡಿಕೊಳ್ಳಲು ನಡೆಸಿದ ಹೋರಾಟದ ಹಾದಿ.
ಈ ಜನರು ಇಲ್ಲಿಗೆ ಅತಿಥಿಗಳಾಗಿ ಬರಲಿಲ್ಲ, ಬದಲಾಗಿ ಬದುಕಲು ಆಗಮಿಸಿದವರು. ದಶಕಗಳ ಬಳಿಕ ಅಸ್ಸಾಂನ ಭಾಗವಾಗಿದ್ದರೂ ಅವರ ಇತಿಹಾಸ, ಸಂಸ್ಕೃತಿ ಮತ್ತು ಆತ್ಮದ ಭಾಗವಾಗಿದ್ದಾರೆ. ನಾವು ಇಂದು ಅಸ್ಸಾಮಿಯನ್ನು ಮಾತನಾಡಿದರೂ ಕನಸನ್ನು ತೆಲುಗಿನಲ್ಲೇ ಕಾಣುತ್ತೇವೆ ಎನ್ನುತ್ತಾರೆ ಪ್ರಕಾಶ್ ರಾವ್.