ಬೆಂಗಳೂರು:ಕಾರಿನ ಮಿರರ್ ಟಚ್ ಮಾಡಿದ್ದಕ್ಕೆ ಸ್ಕೂಟರನ್ನು ಹಿಂಬಾಲಿಸಿಕೊಂಡು ಬಂದು ಅಪಘಾತವೆಸಗಿ ಯುವಕನೊಬ್ಬನ ಸಾವಿಗೆ ಕಾರಣರಾದ ಆರೋಪದಡಿ ದಂಪತಿಯನ್ನು ಪುಟ್ಟೇನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜಿಮ್ ತರಬೇತುದಾರನಾಗಿರುವ ಮನೋಜ್ ಕುಮಾರ್ ಹಾಗೂ ಆತನ ಪತ್ನಿ ಆರತಿ ಶರ್ಮಾ ಬಂಧಿತರು. ಅಕ್ಟೋಬರ್ 25 ರಂದು ರಾತ್ರಿ ಜೆ. ಪಿ. ನಗರ 7ನೇ ಹಂತದ ಶ್ರೀರಾಮ ಲೇಔಟ್ ಬಳಿ ಅಪಘಾತವೆಸಗಿದ್ದ ಆರೋಪಿಗಳು, ಸ್ಕೂಟರ್ ಸವಾರ ದರ್ಶನ್ (24)ನ ಸಾವಿಗೆ ಕಾರಣರಾಗಿದ್ದರು.
ಮತ್ತೋರ್ವ ಸವಾರ ವರುಣ್ (24) ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹತ್ಯೆ ಪ್ರಕರಣವಾಗಿ ಬದಲಾದ ಹಿಟ್ ಆ್ಯಂಡ್ ರನ್ ಕೇಸ್:ಅಕ್ಟೋಬರ್ 25 ರಂದು ರಾತ್ರಿ ನಟರಾಜ ಲೇಔಟ್ ಬಳಿ ದರ್ಶನ್ ಹಾಗೂ ವರುಣ್ ಸಾಗುತ್ತಿದ್ದ ಸ್ಕೂಟರ್, ಮನೋಜ್ ಕುಮಾರ್ನ ಕಾರಿಗೆ ಟಚ್ ಆಗಿತ್ತು. ಇದರಿಂದ ಕಾರಿನ ಬಲ ಭಾಗದ ಮಿರರ್ಗೆ ಹಾನಿಯಾಗಿತ್ತು. ಸಿಟ್ಟಿಗೆದ್ದ ಮನೋಜ್ ಕುಮಾರ್, ತನ್ನ ಕಾರನ್ನು ರಿವರ್ಸ್ ತೆಗೆದುಕೊಂಡು ದರ್ಶನ್ ಹಾಗೂ ವರುಣ್ ಸಾಗುತ್ತಿದ್ದ ಸ್ಕೂಟರನ್ನು ಹಿಂಬಾಲಿಸಿದ್ದ. ಬಳಿಕ ರಾತ್ರಿ 11:30ರಸುಮಾರಿಗೆ ಜೆ.
ಪಿ. ನಗರ 7ನೇ ಹಂತದ ಶ್ರೀರಾಮ ಲೇಔಟ್ ಬಳಿ ಉದ್ದೇಶಪೂರ್ವಕವಾಗಿ ಅಪಘಾತವೆಸಗಿದ್ದ. ಅಪಘಾತದ ರಭಸಕ್ಕೆ ಬೈಕ್ ಸಮೇತ ಮುಗ್ಗರಿಸಿ ರಸ್ತೆಯಲ್ಲಿ ಬಿದ್ದಿದ್ದ ದರ್ಶನ್, ತಲೆಗೆ ತೀವ್ರವಾಗಿ ಗಾಯವಾಗಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದ. ಗಾಯಗೊಂಡಿದ್ದ ವರುಣ್ನನ್ನು ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. 2 ಕಿ.
ಮೀ ದೂರ ಹಿಂಬಾಲಿಸಿಕೊಂಡು ಬಂದು ಕೃತ್ಯ ಎಸಗಿರುವುದು ಬಯಲು:ಅಪಘಾತದ ಕುರಿತು ಆರಂಭದಲ್ಲಿ ಜೆ. ಪಿ. ನಗರ ಸಂಚಾರ ಠಾಣೆ ಪೊಲೀಸರು ಹಿಟ್ ಆ್ಯಂಡ್ ರನ್ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ್ದರು. ಆದರೆ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಹೆಚ್ಚಿನ ತನಿಖೆ ಕೈಗೊಂಡಾಗ ಅಪಘಾತಕ್ಕೂ ಮುನ್ನ ನಡೆದಿದ್ದ ರೋಡ್ ರೇಜ್ನ ಸಿಟ್ಟಿಗೆ ಆರೋಪಿಗಳು, 2 ಕಿ. ಮೀ ದೂರ ಹಿಂಬಾಲಿಸಿಕೊಂಡು ಬಂದು ಉದ್ದೇಶಪೂರ್ವಕವಾಗಿ ಕೃತ್ಯ ಎಸಗಿರುವುದು ಬಯಲಾಗಿದೆ.
ಅಲ್ಲದೆ ಕೃತ್ಯವೆಸಗಿದ ಕೆಲ ಸಮಯದ ಬಳಿಕ ಅದೇ ಸ್ಥಳಕ್ಕೆ ಮಾಸ್ಕ್ ಧರಿಸಿಕೊಂಡು ಬಂದಿದ್ದ ಆರೋಪಿ ದಂಪತಿ, ರಸ್ತೆಯಲ್ಲಿ ಬಿದ್ದಿದ್ದ ಕಾರಿನ ಅವಶೇಷಗಳನ್ನು ಆಯ್ದುಕೊಂಡು ತೆರಳಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿತ್ತು. ದಂಪತಿಗೆ ನ್ಯಾಯಾಂಗ ಬಂಧನ: ಹತ್ಯೆ, ಸಾಕ್ಷ್ಯನಾಶಕ್ಕೆ ಯತ್ನಿಸಿದ ಆರೋಪದಡಿ ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ದಂಪತಿಯನ್ನು ಬಂಧಿಸಲಾಗಿದೆ. ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಬಿ ಜಗಲಾಸರ್ ತಿಳಿಸಿದ್ದಾರೆ.








