ಬೆಂಗಳೂರು:ಮದುವೆ ಎಂಬುದು ಕೇವಲ ಮಕ್ಕಳಾಟವಲ್ಲ ಎಂದು ಒತ್ತಿ ಹೇಳಿರುವ ಹೈಕೋರ್ಟ್, ವೈವಾಹಿಕ ಜೀವನದಲ್ಲಿ ಪತಿ - ಪತ್ನಿ ಒಬ್ಬರಿಗೊಬ್ಬರು ರಾಜಿ ಮತ್ತು ಹೊಂದಾಣಿಕೆ ಮಾಡಿಕೊಂಡು ಜೀವನ ಮುನ್ನಡೆಸಬೇಕಾಗುತ್ತದೆ ಎಂದು ತಿಳಿಸಿದೆ. ಪತ್ನಿ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪತಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಯಂತ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಉಮೇಶ್ ಎಂ. ಅಡಿಗ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ, ಹಿಂದೂ ಧರ್ಮ ಮತ್ತು ಆಚರಣೆಗಳ ಪ್ರಕಾರ ಮದುವೆ ಎಂದರೆ ಪತಿ - ಪತ್ನಿಯ ನಡುವಿನ ಸಹಭಾಳ್ವೆ ಮಾತ್ರವಲ್ಲ. ಅದೊಂದು ಪವಿತ್ರ ಬಂಧ ಎಂಬುದಾಗಿದೆ.
ದಂಪತಿಯು ಧರ್ಮ, ಅರ್ಥ, ಕಾಮ ಮತ್ತು ಮೋಕ್ಷದಲ್ಲಿ ಪರಸ್ಪರ ಸಹಕರಿಸಬೇಕು ಎಂಬ ನಂಬಿಕೆಯ ಮೇಲೆ ಮದುವೆ ಮಾಡಲಾಗಿರುತ್ತದೆ. ಕೇವಲ ಆರೋಪ ಪ್ರತ್ಯಾರೋಪಗಳ ಮೂಲಕ ಈ ಪವಿತ್ರವಾದ ಬಂಧವನ್ನು ವಿಭಜಿಸಲು ಸಾಧ್ಯವಿಲ್ಲ. ಪ್ರಕರಣ ಸಂಬಂಧ ಸಾಕ್ಷ್ಯಾಧಾರಗಳು ಮತ್ತು ದಾಖಲೆಗಳನ್ನು ಪರಿಶೀಲಿಸಿದ ಪೀಠ, ಮೇಲ್ಮನವಿದಾರರಿಗೆ ಪ್ರತಿವಾದಿಯವರು ಪತ್ನಿಗಿಂತಲೂ ಪ್ರಾಮಾಣಿಕ ಸೇವಕಿ ಅಗತ್ಯವಿತ್ತು, ಅಲ್ಲದೇ, ಪತಿಗೆ ವಿಧೇಯಿಯಾಗಿರಬೇಕು. ಪತಿ ಹೇಳಿದ್ದನ್ನು ಮಾತ್ರ ಮಾಡಬೇಕು. ಚಿನ್ನಾಭರಣಗಳನ್ನು ಧರಿಸಲು ಪತಿ ಅನುಮತಿ ಪಡೆಯಬೇಕಾಗಿತ್ತು.
ಈ ಕಾರಣಗಳಿಂದ ಪತಿಯೊಂದಿಗೆ ಸುಖ ಜೀವನ ನಡೆಸುವುದಕ್ಕೆ ಸಾಧ್ಯವಾಗಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಅಲ್ಲದೇ, ಈ ಪ್ರಕರಣದಲ್ಲಿ ಅರ್ಜಿದಾರರ ಪತಿ ರಾಜಿ ಮಾಡಿಕೊಳ್ಳುವುದು ಇಲ್ಲವೇ ಪತ್ನಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗದ ಪರಿಣಾಮ ಪತ್ನಿಯೊಂದಿಗೆ ವೈವಾಹಿಕ ಸಂಬಂಧ ಮುಂದುವರಿಸಲು ಸಾಧ್ಯವಾಗಿಲ್ಲ. ಅರ್ಜಿದಾರರ ಸಮಸ್ಯೆಗಳು ಕ್ಷುಲ್ಲಕವಾಗಿದ್ದು, ಪರಸ್ಪರ ಚರ್ಚೆ ಮತ್ತು ಮಾತೂಕತೆಯಿಂದ ಬಗೆಹರಿಸಿಕೊಳ್ಳಬಹುದಾಗಿತ್ತು. ಸಣ್ಣ ಸಮಸ್ಯೆಗಳಿಗೂ ಪತ್ನಿಯ ವಿರುದ್ಧ ದೂರುವ ಮೂಲಕ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ಪೀಠ ಹೇಳಿದೆ. ಪತ್ನಿಯು ತನ್ನ ಪತಿಯೊಂದಿಗೆ ನೆಲೆಸಲು ಸಿದ್ದರಿದ್ದರು, ಸಿಂಗಾಪುರದಲ್ಲಿದ್ದ ಉದ್ಯೋಗವನ್ನು ತೊರೆಯುವುದಕ್ಕೂ ಮುಂದಾಗಿದ್ದರು ಎಂದು ಪ್ರತಿವಾದಿ ಪರ ವಕೀಲರು ವಿವರಿಸಿದ್ದಾರೆ.
ಅರ್ಜಿದಾರ ಪತಿ ಅಮೆರಿಕಾದಲ್ಲಿದ್ದು, ತನ್ನ ಪತ್ನಿಯನ್ನು ಅಮೆರಿಕಾಗೆ ಕರೆದುಕೊಂಡು ಹೋಗಲು ಅಗತ್ಯವಿರುವ ವೀಸಾ ಪಡೆಯುವುದಕ್ಕೂ ಮುಂದಾಗಿಲ್ಲ. ಹೀಗಾಗಿ ಮೇಲ್ಮನವಿ ಅರ್ಜಿ ವಜಾಗೊಳಿಸುತ್ತಿರುವುದಾಗಿ ಪೀಠ ತಿಳಿಸಿದೆ. ಪ್ರಕರಣದ ಹಿನ್ನೆಲೆ: ಅಮೆರಿಕದಲ್ಲಿ ಉದ್ಯೋಗದಲ್ಲಿರುವ ಮೇಲ್ಮವಿದಾರರ (ಪತಿ) 2015ರಲ್ಲಿ ಸಿಂಗಾಪುರದಲ್ಲಿ ನೆಲೆಸಿರುವ ಮಹಿಳೆಯನ್ನು ಆನ್ಲೈನ್ ಮೂಲಕ ಪರಿಚಯ ಮಾಡಿಕೊಂಡು ಬಳಿಕ ಹಿಂದೂ ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದರು. ದಂಪತಿಗಳು ಭಾರತದಲ್ಲಿ ಹತ್ತು ದಿನಗಳ ಕಾಲ ವಾಸವಿದ್ದು, ಬಳಿಕ ಸಿಂಗಾಪುರಕ್ಕೆ ತೆರಳಿದ್ದರು. ಅಮೆರಿಕದಲ್ಲಿರುವ ಪತಿ ಪತ್ನಿಯನ್ನು ತನ್ನೊಂದಿಗೆ ಇರಲು ಮನವೊಲಿಸಲು ಪ್ರಯತ್ನಿಸಿದ್ದರೂ, ವಿಫಲವಾಗಿತ್ತು.
ಈ ಸಂಬಂಧ ರಾಜಿ ಪಂಚಾಯತ್ ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ, ಪತ್ನಿ ಪತಿಯಿಂದ ದೂರವಾಗಿಯೇ ಇದ್ದರು ಎಂದು ಅರ್ಜಿಯಲ್ಲಿ ವಿವರಿಸಿದ್ದರು. ಇದೇ ಕಾರಣದಿಂದ ಪತ್ನಿ ತನ್ನೊಂದಿಗೆ ಬರುವುದಕ್ಕೆ ನಿರಾಕರಿಸಿದ್ದಾರೆ. ಆ ಮೂಲಕ ಹಿಂಸೆ ನೀಡುತ್ತಿದ್ದಾರೆ, ಹೀಗಾಗಿ ವಿಚ್ಛೇದನ ನೀಡಬೇಕು ಎಂದು ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಪತಿ ನೀಡಿರುವ ಆರೋಪದಲ್ಲಿ ಪತ್ನಿ ತನ್ನೊಂದಿಗೆ ಸೇರಲಿಲ್ಲ ಎಂಬುದಾಗಿ ತಿಳಿಸಿದ್ದಾರೆ. ಆದರೆ, ಹಿಂಸೆ ನೀಡಿದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ ಯಾವುದೇ ಪುರಾವೆಗಳನ್ನು ನೀಡಿಲ್ಲ.
ಅಲ್ಲದೇ, ಕುಟುಂಬವನ್ನು ಸರಿಪಡಿಸಿಕೊಳ್ಳುವುದಕ್ಕೆ ಮುಂದಾಗದೇ ನೇರವಾಗಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂಬುದಾಗಿ ತಿಳಿಸಿ ಅರ್ಜಿ ವಜಾಗೊಳಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು.








