ಮೈಸೂರು: ಪ್ರತಿಷ್ಠಿತ ಬೋಯಿಂಗ್ ಕಂಪನಿಯೊಂದಿಗೆ ಸಹಭಾಗಿತ್ವ ಸ್ಥಾಪಿಸಿಕೊಂಡಿರುವ ಇಲ್ಲಿನ ರಂಗಸನ್ಸ್ ಏರೋಸ್ಪೇಸ್ ಕಂಪನಿಯ ನೂತನ ಮತ್ತು ಅತ್ಯಾಧುನಿಕ ಘಟಕವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ಇಂದು ಉದ್ಘಾಟಿಸಿದರು. ಬಳಿಕ, ಕಂಪನಿಯಿಂದ ಕೌಶಲ್ಯ ತರಬೇತಿ ಪಡೆದ 60 ಐಟಿಐ ಪದವೀಧರರಿಗೆ ಪ್ರಮಾಣಪತ್ರ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ''ಒಂದು ಕಾಲದಲ್ಲಿ ಅಗರಬತ್ತಿ ವ್ಯಾಪಾರ ಮಾಡುತ್ತಿದ್ದ ಸ್ಥಳೀಯರಾದ ರಂಗಸನ್ಸ್ ಪರಿವಾರದವರು ಈಗ ಏರೋಸ್ಪೇಸ್ ಕ್ಷೇತ್ರದಲ್ಲಿ ಛಾಪು ಮೂಡಿಸಿರುವುದು ಮೈಲಿಗಲ್ಲು.
ಮೊದಲಿನಿಂದಲೂ ಇದ್ದ ಸ್ಥಾವರದ ಪಕ್ಕದಲ್ಲೇ ನೂತನ ಕಚೇರಿಯನ್ನು ನಿರ್ಮಿಸಿಕೊಂಡಿರುವುದು ಗಮನಾರ್ಹ. ವೈಮಾಂತರಿಕ್ಷ ಕ್ಷೇತ್ರದಲ್ಲಿ ಇವರಿಗೆ ಬೇಕಾದ ಎಲ್ಲ ಸಹಕಾರವನ್ನೂ ಕೈಗಾರಿಕೆ ಇಲಾಖೆ ಕೊಡುತ್ತದೆ. ನೂತನ ಘಟಕವು ವಿಸ್ತಾರ, ವಿನ್ಯಾಸ ಮತ್ತು ಮಹತ್ತ್ವಾಕಾಂಕ್ಷೆ ಮೂರರಲ್ಲೂ ಜಾಗತಿಕ ಮಟ್ಟದಲ್ಲಿರುವುದು ಖುಷಿಯ ಸಂಗತಿ'' ಎಂದರು. "ರಂಗಸನ್ಸ್ ಏರೋಸ್ಪೇಸ್ ಜೊತೆ ಬೋಯಿಂಗ್ ಕಂಪನಿ ಕೈಜೋಡಿಸಿರುವುದು ಅಭಿನಂದನಾರ್ಹ. ಇಲ್ಲಿ ಅತ್ಯಾಧುನಿಕ ಉತ್ಪಾದನಾ ವಿಧಾನ ಮತ್ತು ಆಧುನಿಕ ಎಂಜಿನಿಯರಿಂಗ್ ಪ್ರಯೋಗಾಲಯಗಳೆಲ್ಲವೂ ಇವೆ.
ರಂಗಸನ್ಸ್ ಕಂಪನಿಯು ಜಾಗತಿಕ ಗುಣಮಟ್ಟಕ್ಕೆ ತಕ್ಕಂತೆ ಪ್ರಿಸಿಷನ್ ಉತ್ಪಾದನೆಯಲ್ಲಿ ತೊಡಗಿರುವುದು ಯಶಸ್ಸಿಗೆ ಒಂದು ದೊಡ್ಡ ಉದಾಹರಣೆಯಾಗಿದೆ. ನಮ್ಮಲ್ಲಿರುವ ಏರೋಸ್ಪೇಸ್ ಕಂಪನಿಗಳು ಜಾಗತಿಕ ಮಾರುಕಟ್ಟೆಯ ಬೇಡಿಕೆಗಳನ್ನು ಪೂರೈಸಲು ಸಮರ್ಥವಾಗಿವೆ ಎನ್ನುವುದಕ್ಕೆ ಇದಕ್ಕಿಂತ ನಿದರ್ಶನ ಬೇಕಿಲ್ಲ" ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. "ವೈಮಾಂತರಿಕ್ಷ ವಲಯದಲ್ಲಿ ಕೌಶಲ್ಯ ತರಬೇತಿ ನಿರ್ಣಾಯಕವಾಗಿದೆ. ರಂಗಸನ್ಸ್ ಏರೋಸ್ಪೇಸ್ ಈ ಕೆಲಸ ಮಾಡುತ್ತಿರುವುದು ಒಳ್ಳೆಯದು. ಇಲ್ಲಿ ತರಬೇತಿ ಪಡೆದವರ ಪೈಕಿ ಶೇ.
70ರಷ್ಟು ಜನರಿಗೆ ಕಂಪನಿಯೇ ಕೆಲಸ ಕೊಡುತ್ತಿರುವುದು ಸ್ವಾಗತಾರ್ಹ. ಇದರಿಂದ ಯುವಜನರಿಗೆ ಮನೆಬಾಗಿಲಲ್ಲೇ ಅವಕಾಶಗಳು ಸಿಗುತ್ತವೆ. ಇಂತಹ ಜಂಟಿ ಉಪಕ್ರಮಗಳಿಗೆ ಸರ್ಕಾರವೂ ಬೆಂಬಲ ಕೊಡಲಿದೆ. ದೇಶದ ಏರೋಸ್ಪೇಸ್ ಮತ್ತು ರಕ್ಷಣಾ ವಲಯದ ವಹಿವಾಟಿನಲ್ಲಿ ಕರ್ನಾಟಕದ ಪಾಲು ಶೇ. 65ರಷ್ಟಿದೆ.
ರಂಗಸನ್ಸ್ ಕಂಪನಿಯ ಹೊಸ ಹೆಜ್ಜೆಯು ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಒಳ್ಳೆಯ ಸಂಕೇತ" ಎಂದು ಶ್ಲಾಘಿಸಿದರು. "ರಾಜ್ಯವು ಏರೋಸ್ಪೇಸ್ ವಲಯಕ್ಕೆ ಬೇಕಾದ ಪೂರೈಕೆದಾರರ ಸರಪಳಿ, ಆರ್ & ಡಿ ಸಂಸ್ಥೆಗಳು, ಎಂಜಿನಿಯರಿಂಗ್ ಪ್ರತಿಭೆಯ ತಾಣವಾಗಿದೆ. ಹೀಗಾಗಿ ಕರ್ನಾಟಕವು ಈ ಕ್ಷೇತ್ರದಲ್ಲಿ ಇಡೀ ದೇಶಕ್ಕೆ ಅಗ್ರಸ್ಥಾನದಲ್ಲಿದೆ. ರಂಗಸನ್ಸ್ ಮತ್ತು ಬೋಯಿಂಗ್ ಸಹಭಾಗಿತ್ವವು ಇದಕ್ಕೆ ಮತ್ತಷ್ಟು ಶಕ್ತಿ ತುಂಬಿದೆ. ನಮ್ಮ ಯುವಜನರನ್ನು ಇಂತಹ ಉದ್ಯಮಕ್ಷೇತ್ರಗಳಿಗೆ ಸಜ್ಜುಗೊಳಿಸುವುದರ ಕಡೆ ಹೆಚ್ಚಿನ ಗಮನ ಹರಿಸಬೇಕಾಗಿದೆ.
ಆಗಮಾತ್ರ ನಾವು ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿ, ಸ್ಪರ್ಧೆಯನ್ನು ಎದುರಿಸಬಹುದು" ಎಂದು ಎಂ. ಬಿ. ಪಾಟೀಲ್ ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಅವರು ನೂತನ ಘಟಕದ ಹಲವು ವ್ಯವಸ್ಥೆಗಳನ್ನು ವೀಕ್ಷಿಸಿದರು. ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಡಾ.
ಮಹೇಶ ಈ ಸಂದರ್ಭದಲ್ಲಿ ಇದ್ದರು. ಕಾರ್ಯಕ್ರಮದಲ್ಲಿ ರಂಗಸನ್ಸ್ ಏರೋಸ್ಪೇಸ್ ಸಿಇಒ ಪವನ್ ರಂಗ, ಬೋಯಿಂಗ್ ಕಂಪನಿಯ ಹಿರಿಯ ನಿರ್ದೇಶಕ ಅಶ್ವನಿ ಭಾರ್ಗವ, ಬೋಯಿಂಗ್ನ ಇತರ ಅಧಿಕಾರಿಗಳಾದ ಮೋಹನದಾಸ್ ಪಿಳ್ಳೈ, ಗಣಪತಿ ಹೆಬ್ಬಾರ್ ಉಪಸ್ಥಿತರಿದ್ದರು.








